ಶಹಾಪುರ: ಸುರಪುರದಲ್ಲಿ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೊಂಡು ನ್ಯಾಯಾಲಯದ ಕಲಾಪ ನಿರ್ವಹಿಸುತ್ತಿದೆ. ಕಕ್ಷಿದಾರರ ಹಿತದೃಷ್ಟಿಯಿಂದ ಶಹಾಪುರದಲ್ಲಿ ತಾತ್ಕಾಲಿಕವಾಗಿ ವಾರದಲ್ಲಿ 3 ದಿನ ಕೋರ್ಟ್ ಕಲಾಪ ನಡೆಸಲು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪನೆ ಮಾಡಬೇಕು ಎಂದು ಇಂದು (ಮಂಗಳವಾರ ಸೆ. 23) ವಕೀಲರ ಸಂಘದ ಅಧ್ಯಕ್ಷ ಯೂಸೂಫ್ ಸಿದ್ದಿಕಿ ನಿಯೋಗದ ನೇತೃತ್ವದಲ್ಲಿ ಯಾದಗಿರಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಮೂರ್ತಿ ಕೆ.ಎಸ್.ಹೇಮಲೇಖಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ನ್ಯಾಯಮೂರ್ತಿಗಳು ಮನವಿ ಸ್ವೀಕರಿಸಿ ಸಕರಾತ್ಮಕವಾಗಿ ಸ್ಪಂದಿಸಿ ತ್ವರಿತವಾಗಿ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು ಎಂದು ಸಂಘದ ಅಧ್ಯಕ್ಷ ಯೂಸೂಫ್ ಸಿದ್ದಿಕಿ ಮಾಹಿತಿ ನೀಡಿದರು.
ಅಲ್ಲದೆ ವಡಗೇರಾ ತಾಲ್ಲೂಕಿನಲ್ಲಿ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಿ ನ್ಯಾಯಾಲಯದ ಕಲಾಪ ನಡೆಯುವ ತನಕ ಶಹಾಪುರ ನ್ಯಾಯಾಲಯದಲ್ಲಿ ಕೆಲಸ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಯಾದಗಿರಿ ಜಿಲ್ಲಾ ಸಂಕೀರ್ಣದಲ್ಲಿ ವಡಗೇರಾ ತಾಲ್ಲೂಕಿನ ವ್ಯಾಪ್ತಿಯ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಕಕ್ಷಿದಾರರ ಹಿತದೃಷ್ಟಿಯಿಂದ ವರ್ಗಾವಣೆ ಮಾಡಬಾರದು ಎಂದು ಇದೇ ಸಂದರ್ಭದಲ್ಲಿ ನಿವೇದಿಸಿಕೊಳ್ಳಲಾಯಿತು ಎಂದು ಅವರು ತಿಳಿಸಿದರು.
ವಕೀಲರ ಸಂಘದ ನಿಯೋಗದಲ್ಲಿ ಹಿರಿಯ ವಕೀಲರಾದ ರಮೇಶ ದೇಶಪಾಂಡೆ, ಸಯ್ಯದ ಇಬ್ರಾಹಿಂಸಾಬ್ ಜಮದಾರ, ಹನುಮೇಗೌಡ ಮರಕಲ್, ಟಿ.ನಾಗೇಂದ್ರ, ಸಂಘದ ಉಪಾಧ್ಯಕ್ಷ ವಾಸುದೇವ ಕಟ್ಟಿಮನಿ, ಕಾರ್ಯದರ್ಶಿ ಸಂತೋಷ ಸತ್ಯಂಪೇಟೆ, ಮಲ್ಲಿಕಾರ್ಜುನ ಹಯ್ಯಾಳಕರ್, ಮಲ್ಲಪ್ಪ ಪೂಜಾರಿ, ಲಕ್ಷ್ಮಿನಾರಾಯಣ ಕುಲಕರ್ಣಿ, ಶರಣಪ್ಪ ಪ್ಯಾಟಿ, ಅಮರೇಶ ಇಟಗಿ, ಸುಭಾಶ್ಚಂದ್ರ ರಾಂಪುರ ಭಾಗವಹಿಸಿದ್ದರು.
Post Views: 3

